ಹಾವೇರಿ: ಜಮೀನು, ಮನೆ, ವಿಮೆ ಹಣಕ್ಕಾಗಿ ವ್ಯಕ್ತಿಯ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೊರಟ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 27ರಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕೊಲೆ ಮಾಡಲಾಗಿತ್ತು.
38 ವರ್ಷದ ಬಸವರಾಜ್ ಪುಟ್ಟಪ್ಪನವರ್ ಕೊಲೆಗೀಡಾದ ವ್ಯಕ್ತಿ. ಬಸವರಾಜ್ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ ಮತ್ತು ಲೋಕೇಶ್ ಆರೋಪಿಗಳು. ಈ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಆರಂಭದಲ್ಲಿ ಮೃತ ಬಸವರಾಜ್ ಸಾವಿನ ಬಗ್ಗೆ ಅವರ ಸಹೋದರ ಸಂಬಂಧಿ ಶಿವಕುಮಾರ್ಗೆ ಸಂಶಯ ಬಂದಿತ್ತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬಂದಿದೆ.
ಹತ್ಯೆಗೊಂಡಿರುವ ಬಸವರಾಜ್ ತಂದೆ – ತಾಯಿ ಹಾಗೂ ಸಹೋದರರು ನಿಧನ ಹೊಂದಿದ್ದರು. ಬಸವರಾಜ್ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಈತನಿಗೆ 8 ಎಕರೆ ಜಮೀನು, ಮನೆ ಇತ್ತು. ಹಾಗೇ ಆರೋಪಿಗಳೇ ಮೃತನಿಗೆ ಆಕ್ಸಿಡೆಂಟಲ್ ಇನ್ಶೂರೆನ್ಸ್ ಮಾಡಿಸಿದ್ದರು. ಈಗ ಅದರ ಅವಧಿ ಮುಗಿದುಕೊಂಡು ಬರುತ್ತಿದ್ದ ಹಿನ್ನೆಲೆ ವಿಮೆ ಕ್ಲೇಮ್ ಮಾಡಲು ಆರೋಪಿಗಳು ಈ ರೀತಿ ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ವಿವರಿಸಿದ ಎಸ್ಪಿ ಯಶೋದಾ ವಂಟಗೋಡಿ: “ಸೆ. 27 ರಂದು ನಮ್ಮ ಸ್ಟೇಷನ್ ರೋಡ್ ರಟ್ಟಿಹಳ್ಳಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದ ತರಹ ಮೃತದೇಹ ಬಿದ್ದಿರುತ್ತದೆ. ಆತ ಬಸವರಾಜ್ ಎಂದು ತಿಳಿದು ಬರುತ್ತದೆ. ಮೃತನ ಸಂಬಂಧಿ ಶಿವಕುಮಾರ್ ಎಂಬುವವರು ಬಂದು ಹಿಟ್ ಆ್ಯಂಡ್ ರನ್ ಆಗಿದೆ ಎಂದು ದೂರು ನೀಡಿದ್ದರು. ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದೆವು. ಈ ಮಧ್ಯೆ ದೂರುದಾರ ಆತನ ಸಾವಿನಲ್ಲಿ ಅನುಮಾನವಿದೆ. ಆತನಿಗೆ 8 ಎಕರೆ ಜಾಗ ಹಾಗೂ ಇನ್ಶೂರೆನ್ಸ್ ಇತ್ತು. ಆ ಕಾರಣಕ್ಕೆ ಯಾರೋ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು. ತಕ್ಷಣ ನಾವು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಾಗ ಅದು ಅಪಘಾತವಲ್ಲ ಕೊಲೆ ಎಂದು ಬೆಳಕಿಗೆ ಬರುತ್ತದೆ”.
“ಕಳೆದ ವರ್ಷ ಪ್ರಧಾನಿ ಮಂತ್ರಿ ಅವರ ಯೋಜನೆಯ 10 ಲಕ್ಷದ ಮೌಲ್ಯದ ಇನ್ಶೂರೆನ್ಸ್ ಅನ್ನು ಮೃತ ವ್ಯಕ್ತಿಗೆ ಆರೋಪಿಗಳೇ ಮಾಡಿಸಿದ್ದರು. ಅದು ಈ ತಿಂಗಳ 18ಕ್ಕೆ ಮುಗಿಯಲಿದೆ. ಮೃತನಿಗೆ ಮನೆ, ಜಮೀನು ಇತ್ತು. ಈತನಿಗೆ ತಂದೆ-ತಾಯಿ, ಇಬ್ಬರು ಅಣ್ಣಂದಿರೂ ಇದ್ದರು. ಆ 4 ಜನಗಳು 2 ವರ್ಷದ ಒಳಗೆ ಸತ್ತು ಹೋಗಿದ್ದಾರೆ. ಮೃತನಿಗೆ ಯಾರು ಇದ್ದಿರಲಿಲ್ಲ, ಮದುವೆ ಆಗಿರಲಿಲ್ಲ ಜತೆಗೆ ಕುಡಿಯುತ್ತಿದ್ದ. ಇದನ್ನೇ ಉಪಯೋಗಿಸಿಕೊಂಡಿದ್ದ ಆರೋಪಿಗಳು ಮೃತನ ಹತ್ತಿರ ಮನೆ, ಜಮೀನಿನ ವಿಲ್ ಮಾಡಿಸಿಕೊಂಡಿದ್ದರು”.
“ಹಾಗೇ ಮಾಡಿಸಿದ್ದ ಇನ್ಶೂರೆನ್ಸ್ ನಮಗೆ ಕ್ಲೈಮ್ ಆಗಬೇಕು ಅಂತಾ ಆರೋಪಿಗಳು ಪ್ಲ್ಯಾನ್ ಮಾಡಿದ್ದರು. ಮೃತನು ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ. ಅಲ್ಲಿಂದ ಅವನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಬಂದ ಆರೋಪಿಗಳು ಆತ ಶೌಚ ಕೇಳಿದಾಗ ಮಧ್ಯ ರಸ್ತೆಯಲ್ಲಿ ಕೂರಿಸಿ ಹಿಂದಿನಿಂದ ವಾಹನ ತೆಗೆದುಕೊಂಡು ಜೋರಾಗಿ ಬಂದು ಆತನ ಮೇಲೆ ಹತ್ತಿಸಿಕೊಂಡು ಹೋಗಿದ್ದಾರೆ. ಅದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ“ ಎಂದು ಎಸ್ಪಿ ಯಶೋದಾ ವಂಟಗೋಡಿ ವಿವರಿಸಿದ್ದಾರೆ.
ಇದೇ ತರಹದ ಪ್ರಕರಣ ಇತ್ತೀಚೆಗೆ ವಿಜಯನಗರದ ಹೊಸಪೇಟೆ ಹೊರವಲಯದಲ್ಲಿ ನಡೆದಿತ್ತು. ಆರೋಪಿಗಳು 5.25 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನಿಸಿ ಪೊಲೀಸರಿಗೆ ತಗಲಾಕಿಕೊಂಡಿದ್ದರು. ಈ ಪ್ರಕರಣದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮೃತನ ಹೆಸರಲ್ಲಿ 5.25 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿದ್ದರು.
ಈ ಹಣವನ್ನು ಪಡೆಯುವ ಆಸೆಯಿಂದಾಗಿ ಮೊದಲು ಕೊಲೆ ಮಾಡಿ, ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಕರೆತಂದಿದ್ದರು. ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್ ಬಾಡಿಗೆಗೆ ತಂದು ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿ ಅಪಘಾತ ಎಂದು ಬಿಂಬಿಸಿದ್ದರು. ಆದರೆ ಆರೋಪಿಗಳ ಕೆಲ ಎಡವಟ್ಟಿನಿಂದ ಅದು ಕೊಲೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.




