ನವಲಗುಂದ, ಜುಲೈ 6: ಟ್ಯಾಕ್ಸಿ ನಿಲ್ದಾಣಕ್ಕೆ ಶಾಶ್ವತ ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹಿಸಿ ನವಲಗುಂದ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ ನಡೆಸುತ್ತಿರುವ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾ ಬಿಜೆಪಿ (ಗ್ರಾಮಾಂತರ) ಕಾರ್ಯದರ್ಶಿ ದೇವರಾಜ ಬಿ. ದಾಡಿಬಾವಿ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಹಲವು ವರ್ಷಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಟ್ಯಾಕ್ಸಿ ನಿಲ್ದಾಣಕ್ಕಾಗಿ ಅಗತ್ಯ ಸ್ಥಳವನ್ನು ಕಾಯ್ದಿರಿಸಿ, ಉಳಿದ ಪ್ರದೇಶದಲ್ಲಿ ಉದ್ಯಾನ (ಗಾರ್ಡನ್) ನಿರ್ಮಾಣ ಮಾಡುವುದು ಸೂಕ್ತ ಕ್ರಮವಾಗಲಿದೆ ಎಂದು ಹೇಳಿದರು.
ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಮಂಜುನಾಥ ಮೆಣಸಿನಕಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಮಂಜುನಾಥ ಸುಣಗಾರ, ಚೇತನ ನಾಯಕ್, ಅಶೋಕ್ ಬಸಾಪುರ, ಮಂಜುನಾಥ ಹಂಚಿನಾಳ, ಬಾಬು ಕೊಪ್ಪಳ, ರಮೇಶ್ ಅಂಗಡಿ, ಸಂಜು ಪವಾರ್, ಈರಣ್ಣ ಗುಳಗನ್ನವರ, ಹುಸೇನಸಾಬ್ ಕಣವಿ, ಪ್ರವೀಣ್ ಕಳೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಟ್ಯಾಕ್ಸಿ ನಿಲ್ದಾಣಕ್ಕೆ ಶಾಶ್ವತ ಸ್ಥಳವನ್ನು ಮೀಸಲಿಟ್ಟು ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.




