ಬೆಂಗಳೂರಿನಲ್ಲಿ ನಡೆದ ಅತಿದೊಡ್ಡ ರಾಬರಿ ಕೇಸ್ನ ರಹಸ್ಯ ಬಯಲಾಗುತ್ತಿದೆ. 7 ಕೋಟಿ ಹಣದಲ್ಲಿ 5.30 ಕೋಟಿ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಹಣ ಎಲ್ಲಿಗೆ ಹೋಯಿತು? ಪ್ರಕರಣದ ಕಿಂಗ್ಪಿನ್ ಯಾರು ಅನ್ನೋ ವಿವರ ಇಲ್ಲಿದೆ…
ಬೆಂಗಳೂರಲ್ಲಿ ನಡೆದ 7 ರಾಬರಿ ( 7 crore robbery case) ಪ್ರಕರಣವು ದೊಡ್ಡ ಮೊಟ್ಟದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ನಗರದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಚೆನ್ನೈನಲ್ಲಿ 5.3 ಕೋಟಿ ಹಣವನ್ನು ಓರ್ವ ಆರೋಪಿ ಸಮೇತ ವಶಕ್ಕೆ ಪಡೆದಿದ್ದಾರೆ. ಆ ಮೂಲಕ 7 ಕೋಟಿ ದರೋಡೆ ಕೇಸ್ ರೋಚಕಘಟ್ಟ ತಲುಪುತ್ತಿದೆ.
ತನಿಖೆ ಹೇಗೆ ಆರಂಭವಾಯ್ತು..?
7 ಕೋಟಿ ಹಣ ರಾಬರಿ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಗಳು ಎಲ್ಲಿಗೆ ಹೋಗಿದ್ದಾರೆ ಅನ್ನೋ ಆಯಾಮದ ಮೇಲೆ ತನಿಖೆ ಆರಂಭವಾಗಿತ್ತು. ಅಂತೆಯೇ ಸಾಕಷ್ಟು ಕಡೆಗಳಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಾರೆ. ಒಂದಷ್ಟು ತನಿಖೆಗಳ ನಂತರ, ದರೋಡೆಕೋರರು ಇದ್ದ ಇನ್ನೋವಾ ಕಾರು, ಬೆಂಗಳೂರಿನಿಂದ ಚಿತ್ತೂರಿಗೆ ತಲುಪಿದೆ ಎಂಬ ಮಾಹಿತಿ ಸಿಗುತ್ತದೆ.
ಅದೇ ಮಾಹಿತಿ ಆಧಾರದ ಮೇಲೆ ಬೆಂಗಳೂರು ಪೊಲೀಸರು ಚಿತ್ತೂರಿಗೆ ಭೇಟಿ ಕೊಡ್ತಾರೆ. ಅಲ್ಲಿ ಹುಡುಕಾಡುವ ವೇಳೆ ದರೋಡೆಕೋರರು ಬಳಸಿದ್ದ ಇನ್ನೋವಾ ಕಾರು ಪತ್ತೆಯಾಗಿದೆ. ಕಾರಿನ ಚಾಸ್ಸಿ ನಂಬರ್ ಆಧಾರದ ಮೇಲೆ ಮೂಲ ಮಾಲೀಕರನ್ನು ಪತ್ತೆ ಹಚ್ಚುತ್ತಾರೆ.
ಕಾರಿನ ಮೂಲ ಮಾಲೀಕ ಬಾಣಸ್ವಾಡಿ ನಿವಾಸಿ ಅನ್ನೋದು ಗೊತ್ತಾಗುತ್ತದೆ. ಇವರನ್ನು ವಿಚಾರಣೆ ನಡೆಸಿದಾಗ ಇಬ್ಬರು ಯುವಕರಿಗೆ ಕಾರು ಮಾರಾಟ ಮಾಡಿರೋದು ಗೊತ್ತಾಗುತ್ತದೆ. ಅಂತೆಯೇ ಆ ಇಬ್ಬರು ಯುವಕರು ಯಾರೆಂದು ಪೊಲಿಸರು ಪತ್ತೆ ಹಚ್ಚಿಕೊಳ್ತಾರೆ. ಅಂತೆಯೇ ಚಿತ್ತೂರಿನ ಇಬ್ಬರು ಯುವಕರನ್ನ ಪತ್ತೆ ಹಚ್ಚಿ ವಿಚಾರಣೆ ಮಾಡಿದ್ದಾರೆ.
ಅಣ್ಣಪ್ಪನ ಲಿಂಕ್ ಸಿಕ್ಕಿದ್ದು ಹೇಗೆ..?

ತನಿಖೆ ವೇಳೆ ಈ ಇಬ್ಬರು ಯುವಕರ ಜೊತೆ ಬೆಂಗಳೂರಿನ ಓರ್ವ ಕಾನ್ಸ್ಟೇಬಲ್ ಸಂಪರ್ಕದಲ್ಲಿ ಇರೋದು ಗೊತ್ತಾಗಿದೆ. ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪನ ಲಿಂಕ್ ಸಿಗುತ್ತದೆ. ಕೂಡಲೇ ಅಣ್ಣಪ್ಪನನ್ನು ಕರೆದು ವಿಚಾರಣೆ ನಡೆಸುತ್ತಾರೆ. ವಿಚಾರಣೆಯಲ್ಲಿ CMS ಮಾಜಿ ಉದ್ಯೋಗಿ ಝೇವಿಯರ್ನ ಪಾತ್ರ ಇರೋದು ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಇಬ್ಬರು ಕೂಡ ಮಾಸ್ಟರ್ ಮೈಂಡ್ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಇಬ್ಬರು ಸ್ನೇಹಿತರು
ಝೇವಿಯರ್ ಮತ್ತು ಕಾನ್ಸ್ಟೇಬಲ್ ಅಣ್ಣಪ್ಪ ಇಬ್ಬರೂ ಸ್ನೇಹಿತರಾಗಿದ್ದಾರೆ. ಒಂದು ವರ್ಷದ ಹಿಂದೆ ಸಿಎಂಎಸ್ನಲ್ಲಿ ಝೇವಿಯರ್ ಕೆಲಸ ಬಿಟ್ಟಿದ್ದ. ಈ ಅಣ್ಣಪ್ಪನ ವಿರುದ್ಧ ಕೆಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕ್ರೈಂ ಬೀಟ್ ನಿಂದ ತೆಗೆದು ಹೊಯ್ಸಳಕ್ಕೆ ಹಾಕಲಾಗಿತ್ತು. ಇಬ್ಬರು ಕೆಲಸವಿಲ್ಲದೇ ರಾಬರಿ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಬರಿ ನಡೆಯುವ ದಿನ ಅಣ್ಣಪ್ಪ ಹಾಗೂ ಝೇವಿಯರ್ ಸ್ಥಳಕ್ಕೆ ಬಂದಿಲ್ಲ. ರೂಟ್ ಮ್ಯಾಪ್ ರೆಡಿ ಮಾಡಿಕೊಟ್ಟು ವಾಚ್ ಮಾಡುತ್ತ ಕುಳಿತಿದ್ದರು ಅಂತಾ ತನಿಖೆಯಿಂದ ತಿಳಿದುಬಂದಿದೆ.
ಇನ್ನು, ಝೇವಿಯರ್ಗೆ CMS ವಾಹನದ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ. ಎಲ್ಲಿ ಹಣ ಇರುತ್ತದೆ? ಕಳ್ಳತನ ಮಾಡಿದ ಸಂದರ್ಭದಲ್ಲಿ ಯಾವುದನ್ನೆಲ್ಲ ತೆಗೆದುಕೊಂಡ ಹೋಗಬೇಕು? ಹೇಗೆ ಮಾಡಿದರೆ ಬಚಾವ್ ಆಗಬಹುದು ಎನ್ನುವ ಪ್ರತಿಯೊಂದು ಮುಮೆಂಟ್ ಗೊತ್ತಿರುತ್ತದೆ. ಈ ಎಲ್ಲಾ ಮಾಹಿತಿಯನ್ನು ಝೇವಿಯರ್ ನೀಡಿರುತ್ತಾನೆ. ಝೇವಿಯರ್ ಮತ್ತು ಅಣ್ಣಪ್ಪ ಕೂತು ಮಾಡಿರುವ ಪ್ಲಾನ್ ಇದು ಅಂತಾ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಾಸ್ಟರ್ ಮೈಂಡ್ ಆಗಿರುವ ಇವರಿಬ್ಬರು ರಾಬರ್ಗಳನ್ನು ಕೂತಲ್ಲಿಯೇ ಮಾನಿಟರಿಂಗ್ ಮಾಡಿದ್ದಾರೆ. ವಶಕ್ಕೆ ಪಡೆದಿರುವ ಇಬ್ಬರು ಯುವಕರು ರವಿ ಮತ್ತು ರಾಕೇಶ್ ಚಿತ್ತೂರಿನವರೇ ಆಗಿದ್ದಾರೆ. ಅವರ ಮುಖಾಂತರವಾಗಿ ರಾಬರಿ ನಡೆದಿದೆ ಅನ್ನೋದು ಸದ್ಯದ ಮಾಹಿತಿ. ಸದ್ಯ ರವಿ ಮತ್ತು ರಾಕೇಶ್ ಇಬ್ಬರು ಪರಾರಿ ಆಗಿದ್ದಾರೆ.
ಇದರ ಮಧ್ಯೆ ತನಿಖೆಯಲ್ಲಿ ಸಿಕ್ಕ ಸುಳಿವಿನ ಆಧಾರದ ಮೇಲೆ ಚಿತ್ತೂರಿನಿಂದ ಚೆನ್ನೈಗೆ ಹಣವನ್ನು ಕೊಂಡೊಯ್ಯುತ್ತಿದ್ದ ಓರ್ವ ಆರೋಪಿ ಹಾಗೂ 5.30 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿ ವಶಕ್ಕೆ ಪಡೆಯಲಾಗಿರುವ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ರಾಕೇಶ್ ಮತ್ತು ರವಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗೆಯೇ, 7 ಕೋಟಿಯಲ್ಲಿ 5.30 ಕೋಟಿ ಹಣ ಸಿಕ್ಕಿದೆ. ಇನ್ನುಳಿದ ಹಣ ಯಾರು ತೆಗೆದುಕೊಂಡು ಹೋಗಿದ್ದಾರೆ ಅನ್ನೋದ್ರ ಬಗ್ಗೆಯೂ ತನಿಖೆ ನಡೆಯುತ್ತಿದೆ.




