ಹುಬ್ಬಳ್ಳಿ ನಗರದಲ್ಲಿ ವಾಹನ ಸವಾರರು ಪ್ರತಿದಿನ ಅನುಭವಿಸುತ್ತಿರುವ ಟ್ರಾಫಿಕ್ ಸಮಸ್ಯೆ ಇದೀಗ ಮಿತಿ ಮೀರಿದೆ. ಅದರಲ್ಲೂ ಗೋಕುಲ ರೋಡ್ ನ ಹೊಸೂರು ಕ್ರಾಸ್ ಬಳಿ ಪರಿಸ್ಥಿತಿ ಹೇಳತೀರದಾಗಿದೆ.
ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಮತ್ತು ಫ್ಲೈಓವರ್ ನಿರ್ಮಾಣದಿಂದಾಗಿ ಈಗಾಗಲೇ ರಸ್ತೆಗಳು ಕಿರಿದಾಗಿವೆ.
ಇಷ್ಟೊಂದು ಜನನಿಬಿಡ ಮತ್ತು ವಾಹನ ದಟ್ಟಣೆ ಇರುವ ಜಾಗದಲ್ಲಿ ಸಂಚಾರ ನಿಯಂತ್ರಿಸಲು ಒಬ್ಬೇ ಒಬ್ಬ ಟ್ರಾಫಿಕ್ ಪೊಲೀಸ್ ಕೂಡ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರಿಲ್ಲದ ಕಾರಣ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಯಾರು ಎಲ್ಲಿ ಬೇಕಾದರೂ ವಾಹನ ತೂರುತ್ತಿದ್ದಾರೆ.
ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸ್ಥಳೀಯರು, ಕೂಡಲೇ ಟ್ರಾಫಿಕ್ ಪೊಲೀಸ್ ಇಲಾಖೆ ಹೊಸೂರು ಕ್ರಾಸ್ ಗೆ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.




