ಹುಬ್ಬಳ್ಳಿಯ ಅಮರಗೋಳದಲ್ಲಿರುವ ‘ಪ್ರಕಾಶ್ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ನಲ್ಲಿ ರೋಗಿಗಳ ಜೀವದ ಜೊತೆ ಬಹಿರಂಗವಾಗಿಯೇ ಚೆಲ್ಲಾಟವಾಡಲಾಗುತ್ತಿದೆ ಎಂದು ನಮ್ಮ ‘ನ್ಯೂಸ್ 88’ ಚಾನೆಲ್ ಬಿತ್ತರಿಸಿದ್ದ ಧ್ವನಿಪೂರ್ಣ ಹಾಗೂ ಸರಣಿ ವರದಿಗಳಿಗೆ ಇದೀಗ ಬೃಹತ್ ಮಟ್ಟದ ಸ್ಪಂದನೆ ಸಿಕ್ಕಿದೆ. ಯಾವುದೇ ರೀತಿಯ ಪ್ರಾಥಮಿಕ ವೈದ್ಯಕೀಯ ತಪಾಸಣೆಗಳನ್ನು ಮಾಡದೆ, ಕೇವಲ ದೇಹದ ನೋವು ಎಂದು ಬಂದ ತಕ್ಷಣವೇ ರೋಗಿಗಳಿಗೆ ರೇಂಡಮ್ ಆಗಿ ಇಂಜೆಕ್ಷನ್ಗಳನ್ನು ಚುಚ್ಚಲಾಗುತ್ತಿದೆ ಎಂಬ ಗಂಭೀರ ಆರೋಪದ ಬಗ್ಗೆ ನ್ಯೂಸ್ 88 ಅತ್ಯಂತ ಜವಾಬ್ದಾರಿಯುತವಾಗಿ ಸವಿವರ ವರದಿ ಬಿತ್ತರಿಸಿತ್ತು.
ಈ ಬಿಗ್ ಇಂಪ್ಯಾಕ್ಟ್ ವರದಿಯ ಬೆನ್ನಲ್ಲೇ ತಕ್ಷಣವೇ ಎಚ್ಚೆತ್ತುಕೊಂಡಿರುವ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHO), ಘಟನೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ತನಿಖೆಗೆ ಅಧಿಕೃತ ಆದೇಶ ಹೊರಡಿಸಿದೆ. ಸ್ಥಳೀಯರ ದೂರು ಹಾಗೂ ನ್ಯೂಸ್ 88 ತನಿಖಾ ವರದಿಯ ಆಧಾರದ ಮೇಲೆ ಅಧಿಕಾರಿಗಳು ಈಗ ಅಕ್ರಮ ಎಸಗುತ್ತಿದ್ದ ಆಸ್ಪತ್ರೆಯ ಕುತ್ತಿಗೆಗೆ ಕೈಹಾಕಿದೆ..
ನ್ಯೂಸ್ 88 ಚಾನೆಲ್ನಲ್ಲಿ ಬಿತ್ತರಗೊಂಡ ವರದಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯವು 18.08.2026 ರಂದು ಅಧಿಕೃತ ವಿಚಾರಣಾ ಆದೇಶ ಪತ್ರವನ್ನು ಹೊರಡಿಸಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (KPME) ಹಾಗೂ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಕಟ್ಟುನಿಟ್ಟಿನ ನಿಯಮಾವಳಿಗಳ ಪ್ರಕಾರ ಈ ಕ್ಲಿನಿಕ್ ಅಥವಾ ಆಸ್ಪತ್ರೆಯನ್ನು ನಡೆಸಲಾಗುತ್ತಿದೆಯೇ, ಅಲ್ಲಿನ ವೈದ್ಯರು ಅಧಿಕೃತ ಪದವಿ ಹಾಗೂ ನೋಂದಣಿ ಹೊಂದಿದ್ದಾರೆಯೇ ಮತ್ತು ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸಾ ಪದ್ಧತಿಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಲು ಮೂವರು ಹಿರಿಯ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಈ ತನಿಖಾ ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ KPME/PCPNDT ಜಿಲ್ಲಾ ನೋಡಲ್ ಅಧಿಕಾರಿಯಾದ ಡಾ. ಮಹೇಶ್ ಚಿತ್ತರಗಿ, ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಹುಲಗಣ್ಣ ಇಂಜಗನರಿ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಶ್ರೀ ನಯೀಂ ಮುಲ್ಲಾ ಅವರನ್ನು ನಿಯೋಜಿಸಲಾಗಿದೆ. ಈ ತನಿಖಾಧಿಕಾರಿಗಳ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕ್ಲಿನಿಕ್ನ ದಾಖಲೆಗಳು, ಚಿಕಿತ್ಸಾ ಕೊಠಡಿಗಳು, ನೀಡಲಾಗುತ್ತಿರುವ ಔಷಧಗಳು ಮತ್ತು ಇಂಜೆಕ್ಷನ್ಗಳ ಮಾದರಿಗಳನ್ನು ಪರಿಶೀಲಿಸಲಿದೆ. ಇಷ್ಟೇ ಅಲ್ಲದೆ, ಮುಂದಿನ 7 ದಿನಗಳ ಒಳಗಾಗಿ ಸಮಗ್ರ ತನಿಖಾ ವರದಿಯನ್ನು ಕಚೇರಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದ್ದಾರೆ.
ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ನ್ಯೂಸ್ 88 ಕೈಗೆತ್ತಿಕೊಂಡ ಈ ಜನಪರ ವರದಿಗೆ ದೊಡ್ಡ ಗೆಲುವು ಸಿಕ್ಕಂತಾಗಿದ್ದು, ಇಲಾಖೆ ರಚಿಸಿರುವ ತನಿಖಾ ತಂಡವು ನಡೆಸುವ ಪರಿಶೀಲನೆಯಲ್ಲಿ ಆಸ್ಪತ್ರೆಯ ಯಾವೆಲ್ಲಾ ಅಕ್ರಮಗಳು ಹೊರಬರಲಿವೆ ಎಂಬುದನ್ನು ಕಾದು ನೋಡಬೇಕಿದೆ.




