ರಾಮನಗರ: ಜಾಲಿವುಡ್ ಸ್ಟುಡಿಯೋಗೆ (Jollywood Studios) ರಾಮನಗರ ತಾಲೂಕು ಆಡಳಿತ ಬೀಗ ಹಾಕಿದೆ. ಅದರ ಪರಿಣಾಮ ಬಿಗ್ಬಾಸ್ ಶೋಗೆ ತಟ್ಟಿದ್ದು, ಸ್ಪರ್ಧಿಗಳನ್ನ ರೆಸಾರ್ಟ್ನಲ್ಲಿ ಇರಿಸಲಾಗಿದೆ. ನಿನ್ನೆ ಸಂಜೆಯಿಂದ ಬಿಗ್ಬಾಸ್ ಮನೆಯಲ್ಲಿ ಯಾವುದೇ ಶೂಟಿಂಗ್ ಆಗಿಲ್ಲ. ಅತಿದೊಡ್ಡ ರಿಯಾಲಿಟಿ ಶೋ ಅರ್ಧಕ್ಕೆ ನಿಲ್ಲುವ ಆತಂಕವಿದ್ದು, ಕಾನೂನು ಹೋರಾಟ ಶುರುವಾಗಿದೆ..
ಇದರ ಮಧ್ಯೆ ಜಾಲಿವುಡ್ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಭೇಟಿಗಾಗಿ ಕಾಯುತ್ತಿದೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿರೋ ಜಾಲಿವುಡ್ ಸ್ಟೂಡಿಯೋ ಸಿಬ್ಬಂದಿ, ಜಿಲ್ಲಾಧಿಕಾರಿಗಳ ಭೇಟಿ ಮಾಡುತ್ತಿದ್ದಾರೆ. ಈಗಾಗಲೇ ಡಿಸಿ ಜತೆ ಒಂದು ಸುತ್ತು ಮಾತುಕತೆ ನಡೆದಿದೆ. ಜಾಲಿವುಡ್ ಸಿಬ್ಬಂದಿ ಜತೆ 20 ನಿಮಿಷಗಳ ಕಾಲ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಜಾಲಿವುಡ್ನ ಮನವಿ ಪತ್ರವನ್ನು ಪಡೆಯದೇ ಕಾಯಲು ತಿಳಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾಲಿವುಡ್ ಸಿಬ್ಬಂದಿ ಕಾದು ಕೂತಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ ಅಂತಾ ನೋಡೋದಾದರೆ, ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನ ಪಾಲನೆ ಮಾಡ್ತೇವೆ. ವೆಲ್ಸ್ ಸ್ಟುಡಿಯೋದಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಏಕಾಏಕಿ ಬೀಗ ಹಾಕಿರುವ ಕಾರಣ ನೂರಾರು ಜನ ಭವಿಷ್ಯ ಅತಂತ್ರವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದೆ. ಹಠಾತ್ ಸ್ಥಗಿತಗೊಳಿಸಿದ ಕಾರಣ ನಷ್ಟವಾಗಿದೆ. ನೀವು 15 ದಿನಗಳ ಕಾಲಾವಕಾಶ ಕೊಡಬೇಕು. 15 ದಿನದೊಳಗೆ ಎಲ್ಲಾ ಅನುಮತಿಗಳನ್ನ ಪಡೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ.




