ಮುಂಬೈ: ಸಾಮಾನ್ಯವಾಗಿ ರಾಜಕಾರಣಿಗಳು ಭದ್ರತಾ ಸಿಬ್ಬಂದಿ, ದುಬಾರಿ ಕಾರುಗಳು ಹಾಗೂ ಬೆಂಬಲಿಗರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಮಹಾರಾಷ್ಟ್ರದ ಘಾಟ್ಕೋಪರ್ ಬಿಜೆಪಿ ಶಾಸಕ ಪರಾಗ್ ಶಾ ವಿಭಿನ್ನ ಪ್ರಯೋಗವೊಂದರ ಮೂಲಕ ಗಮನ ಸೆಳೆದಿದ್ದಾರೆ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಫಿಡವಿಟ್ನಲ್ಲಿ ₹3,383 ಕೋಟಿಗೂ ಅಧಿಕ ಆಸ್ತಿ ಘೋಷಿಸಿರುವ ಪರಾಗ್ ಶಾ, ಭಿಕ್ಷುಕನ ವೇಷ ಧರಿಸಿ ಮುಂಬೈನ ಘಾಟ್ಕೋಪರ್ ರೈಲು ನಿಲ್ದಾಣದ ಸುತ್ತಮುತ್ತ ಜನರ ನಡುವೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಬಟ್ಟೆ ಧರಿಸಿ, ಗುರುತು ಮರೆಮಾಚಿಕೊಂಡು ಜನರಲ್ಲಿ ಸಹಾಯ ಕೇಳಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪರ್ಯುಷಣ ಪರ್ವ ಹಾಗೂ ಜೈನ ಚಾತುರ್ಮಾಸದ ಸಂದರ್ಭದಲ್ಲಿ ಈ ಪ್ರಯೋಗ ಕೈಗೊಂಡಿದ್ದು, ಬಡವರು, ನಿರ್ಗತಿಕರು ಮತ್ತು ಇತರರ ಸಹಾಯದ ಮೇಲೆ ಬದುಕುವವರ ಪರಿಸ್ಥಿತಿಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವುದು ಉದ್ದೇಶ ಎಂದು ಪರಾಗ್ ಶಾ ತಿಳಿಸಿದ್ದಾರೆ. ಈ ಪ್ರಯೋಗಕ್ಕೆ ರಾಷ್ಟ್ರೀಯ ಸಂತ ನಮ್ರಮುನಿ ಮಹಾರಾಜ್ ಸಾಹೇಬ್ ಅವರ ಸಂದೇಶ ಪ್ರೇರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ವೇಷದಲ್ಲಿದ್ದಾಗ ಕೆಲವರು ಹಣ ನೀಡಿದರೆ, ಕೆಲವರು ಆಹಾರ ನೀಡಿದರು. ಇನ್ನು ಕೆಲವರು ನಿರ್ಲಕ್ಷಿಸಿ ತೆರಳಿದರು. ನಂತರ ವೇಷ ಬದಲಿಸಿ ತಮ್ಮ ಸಾಮಾನ್ಯ ರೂಪದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಕಾರಿನೊಂದಿಗೆ ಅದೇ ಪ್ರದೇಶಕ್ಕೆ ಮರಳಿದಾಗ ಜನರ ಪ್ರತಿಕ್ರಿಯೆ ಬದಲಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಕೆಲವರು ಬಡವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಒಂದು ದಿನದ ಪ್ರಯೋಗದಿಂದ ಬಡತನದ ಸಂಪೂರ್ಣ ಅನುಭವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ವ್ಯಕ್ತಿಯ ನೋಟ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಸ್ಥಾನಮಾನ ಬದಲಾದಾಗ ಸಮಾಜದ ವರ್ತನೆಯೂ ಬದಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಈ ಪ್ರಯೋಗ ಮುನ್ನೆಲೆಗೆ ತಂದಿದೆ.




