ಹುಬ್ಬಳ್ಳಿ: ಕಳೆದ ಶುಕ್ರವಾರ ಮಟಮಟ ಮಧ್ಯಾಹ್ನವೇ ನಡು ರಸ್ತೆಯಲ್ಲಿ ಯುವಕನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ತಂಡ ಮುಂಜಾನೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಗಬ್ಬೂರು ಬೈಪಾಸ್ ಬಳಿ ವಶಕ್ಕೆ ಪಡೆದಿದೆ.
ಕೊಲೆಯಾದ ಯುವಕನನ್ನು ದಾದಾಪೀರ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹುಬ್ಬಳ್ಳಿಯ ಈಶ್ವರ ನಗರದ ವೀರೇಂದ್ರ ಮಟ್ಟಿ ತಳಕಲ್ ಹಾಗೂ ದೀಪಕ್ ಚಲವಾದಿ ಆರೋಪಿಗಳೆಂದು ಹೇಳಲಾಗುತ್ತಿದೆ.
ಈ ಕೊಲೆಗೆ ಹಳೆಯ ದ್ವೇಷವೇ ಕಾರಣವಾಗಿರಬಹುದು ಎಂಬ ಶಂಕೆ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ. 2015ರಲ್ಲಿ ಈಶ್ವರ ನಗರದಲ್ಲಿ ಮಾರುತಿ ತಳಕಲ್ ಎಂಬಾತನ ಕೊಲೆ ನಡೆದಿತ್ತು. ಆ ಪ್ರಕರಣದಲ್ಲಿ ದಾದಾಪೀರ ಮೊದಲ ಆರೋಪಿಯಾಗಿದ್ದ ಎನ್ನಲಾಗಿದ್ದು, ಬಳಿಕ ಪ್ರಕರಣ ರಾಜೀ ಮೂಲಕ ಇತ್ಯರ್ಥಗೊಂಡು ಖುಲಾಸೆಯಾಗಿತ್ತು ಎನ್ನಲಾಗಿದೆ.
ಇದೇ ಹಳೆಯ ಕೊಲೆ ಪ್ರಕರಣದ ದ್ವೇಷದ ಹಿನ್ನೆಲೆಯಲ್ಲಿ ದಾದಾಪೀರನ ಮೇಲೆ ದಾಳಿ ನಡೆದಿರಬಹುದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಶಕ್ಕೆ ಪಡೆದಿರುವ ವೀರೇಂದ್ರ ಮಟ್ಟಿ ತಳಕಲ್, ಈ ಹಿಂದೆ ಕೊಲೆಯಾಗಿದ್ದ ಮಾರುತಿ ತಳಕಲ್ ಅವರ ಸಹೋದರ ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ಆರೋಪಿ ದೀಪಕ್ ಚಲವಾದಿ, ಮಾರುತಿ ಚಲವಾದಿ ಅವರ ಅಳಿಯ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣವೇನು? ದಾಳಿ ಪೂರ್ವನಿಯೋಜಿತವಾಗಿತ್ತೇ? ಇನ್ನೂ ಯಾರಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಮಧ್ಯಾಹ್ನ ನಡು ರಸ್ತೆಯಲ್ಲೇ ನಡೆದಿದ್ದ ಈ ಕೊಲೆ ಪ್ರಕರಣ ಹುಬ್ಬಳ್ಳಿ ನಗರದಲ್ಲಿ ಆತಂಕ ಮೂಡಿಸಿತ್ತು. ಇದೀಗ ಆರೋಪಿಗಳು ಪೊಲೀಸರ ವಶಕ್ಕೆ ಸಿಕ್ಕಿರುವುದರಿಂದ ಪ್ರಕರಣದ ಹಿಂದಿರುವ ಸಂಪೂರ್ಣ ಸತ್ಯ ತನಿಖೆಯಿಂದ ಹೊರಬರಬೇಕಿದೆ.




